● ಸಂಗ್ರಹಯೋಗ್ಯ ಮಾಹಿತಿ, ಚಿತ್ರಗಳನ್ನೊಳಗೊಂಡ ಪ್ರದರ್ಶನ
● ಮೂಲಭೂತ ಕೊರತೆ ನೀಗಿಸುವಲ್ಲಿ ಸೋತ ಗ್ಯಾಲರಿ ಆಡಳಿತ
– ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ವೆಂಕಟಪ್ಪ ಚಿತ್ರಶಾಲೆಗೆ 50 ವರ್ಷ ಪೂರ್ಣಗೊಂಡಿದೆ. ಅನೇಕ ದೃಶ್ಯ ಕಲಾವಿದರ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಏಕೈಕ ಸರ್ಕಾರಿ ಗ್ಯಾಲರಿ ಇದು. ದುರದೃಷ್ಟವಶಾತ್ ಕಳೆದ ಹತ್ತುವರ್ಷಗಳಿಂದ ಈ ಗ್ಯಾಲರಿ ಉಳಿವಿಗಾಗಿ ಕಲಾವಿದರು ನಡೆಸಿರುವ ಹೋರಾಟ ಒಂದೆರಡಲ್ಲ. ಸಾಲು ಸಾಲು ಹೋರಾಟಗಳು ನಡೆದಿವೆಯಾದರೂ ಕರ್ನಾಟಕ ಸರ್ಕಾರ ಕಲಾವಿದರ ಧ್ವನಿಯನ್ನು ಕೇಳಿಸಿಕೊಳ್ಳಲೇ ಇಲ್ಲ, ಕೇಳಿಸಿಕೊಂಡಿದ್ದರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದಾಗಿ ಗ್ಯಾಲರಿಯಲ್ಲಿ ಕಲಾಪ್ರದರ್ಶನಗಳು ನಡೆಯದೆ ಖಾಲಿ ಬಿದ್ದಿತ್ತು. ಅಂತೂ ಇಂತೂ ಇತ್ತೀಚಿಗೆ ಖಾಸಗಿ ಸಂಸ್ಥೆ ಈ ಬಗ್ಗೆ ಆಸಕ್ತಿ ತೋರಿ, ನವೀಕರಣಗೊಂಡು ಅದೀಗ ಕಲಾವಿದರ ಕಲಾಪ್ರದರ್ಶನಗಳಿಗೆ ಮತ್ತೆ ಸಾಕ್ಷಿಯಾಗುತ್ತಿದೆ. ಒಂದೊಳ್ಳೆಯ ಸಂದರ್ಭದಲ್ಲೇ ಗ್ಯಾಲರಿಯ ನವೀಕರಣ ಕಾಮಗಾರಿ ಪೂರ್ಣವಾಗಿದೆ. ಕಲಾಚಟುವಟಿಕೆಗಳೂ ನಡೆಯುತ್ತಿರುವುದು ಖುಷಿಯ ವಿಚಾರ.
ಆದರೆ, ಇಷ್ಟಾಗಿಯೂ ಗ್ಯಾಲರಿ ಒಂದು ಅಂತಾರಾಷ್ಟ್ರೀಯ ಗುಣಮಟ್ಟ ಕಂಡಿಲ್ಲವಲ್ಲ ಎನ್ನುವ ಕೊರಗು ಖಂಡಿತವಾಗಿ ಕಲಾಸಮುದಾಯದಲ್ಲಿದೆ. ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನೂ ನೀಡಬಹುದು. ಹೆಚ್ಚೂಕಡಿಮೆ 10 ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರಾದರೂ ಇಂದಿಗೂ ಇಲ್ಲಿನ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಏಕೆ? ‘ಮಾಡಿದ್ದುಣ್ಣೋ ಮಹರಾಯ’ ಎನ್ನುವ ಅಧಿಕಾರಿಗಳ ಧೋರಣೆಯಿಂದಾಗಿ ಕಲಾವಿದರ ಪರದಾಟ ನಿಲ್ಲುತ್ತಿಲ್ಲ ಎನ್ನುವ ಭಾವನೆ ಕಲಾಸಮುದಾಯದಲ್ಲಿ ಮೂಡಿದೆ. ಖಾಸಗಿ ಸಂಸ್ಥೆ ನವೀಕರಣ ಮಾಡಿಕೊಟ್ಟ ಬಳಿಕವೂ ಇನ್ನೂ ಯಾಕೆ ಈ ಸಮಸ್ಯೆಗಳನ್ನು ಎದುರಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವೂ ಸಿಗುತ್ತಿಲ್ಲ. ಹೀಗಿದ್ದೂ, ವೆಂಕಟಪ್ಪ ಚಿತ್ರಶಾಲೆಯಲ್ಲಿನ ಗ್ಯಾಲರಿಗಳು ಕಲಾವಿದರ ಪ್ರದರ್ಶನಗಳಿಗೆ ಸಾಕ್ಷಿಯಾಗಲಾರಂಭಿಸಿದೆ. ಉದ್ಘಾಟನೆಯಾಗಿ ಕಳೆದ ಆರೇಳು ತಿಂಗಳಲ್ಲಿ ಸಾಕಷ್ಟು ಕಲಾ ಪ್ರದರ್ಶನಗಳು ನಡೆದಿವೆ.
ಗ್ಯಾಲರಿಗೆ ಮೂಲಭೂತವಾಗಿ ಇರಬೇಕಾದ ಸವಲತ್ತುಗಳು ಈ ಕ್ಷಣಕ್ಕೂ ಸಮಸ್ಯೆಯಿಂದ ಕೂಡಿದೆ. ಇದೇನು ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎನ್ನುವಂತಿಲ್ಲ. ಅವರೆಲ್ಲರ ಗಮನದಲ್ಲಿದ್ದೂ ಸಮಸ್ಯೆಯಾಗಿಯೇ ಉಳಿದಿರುವುದು ವಿಷಾದನೀಯ. ಗ್ಯಾಲರಿ ಉಳಿವಿಗಾಗಿ ಹೋರಾಟ ನಡೆಸಿದ ಫೋರಂ ಅರಿವಿಗೂ ಈ ಸಮಸ್ಯೆಗಳ ಬಗ್ಗೆ ಗೊತ್ತಿದೆ. ವೆಂಕಟಪ್ಪ ಗ್ಯಾಲರಿಯನ್ನೇ ಉದ್ದೇಶವಾಗಿಸಿಕೊಂಡು ಸರ್ಕಾರವೇ ಸಲಹಾ ಸಮಿತಿಯೊಂದನ್ನು ರಚಿಸಿದ್ದು, ಅವರ ಅರಿವಿಗೂ ಈ ಎಲ್ಲಾ ವಿಚಾರಗಳು ಗೊತ್ತಿದೆ ಎಂದೇ ಭಾವಿಸೋಣ. ಮತ್ತೆ ಮತ್ತೆ ಈ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗೂ ಕಾರಣವಿದೆ. ಏನದು ಕಾರಣ ಅಂತೀರಾ…?



ವೆಂಕಟಪ್ಪ ಆರ್ಟ್ ಗ್ಯಾಲರಿ ಫೋರಂ ಇತ್ತೀಚಿಗೆ ‘ವಾದ 50 ವಾಗ್ವಾದ 10’ ಶೀರ್ಷಿಕೆಯಡಿಯಲ್ಲಿ ಪ್ರದರ್ಶನವೊಂದನ್ನು ಆಯೋಜಿಸಿತ್ತು. ಗ್ಯಾಲರಿಗೆ 50 ವರ್ಷ, ಫೋರಂಗೆ 10 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರದರ್ಶನ ಆಯೋಜನೆಯಾಗಿತ್ತು. ಗ್ಯಾಲರಿ ಕುರಿತಾದ 50 ವರ್ಷಗಳ ಇತಿಹಾಸ ತೆರೆದಿಡುವ ಒಂದು ಸುಂದರ ಪ್ರದರ್ಶನ ಇದಾಗಿತ್ತು. ಈ ಪ್ರದರ್ಶನಕ್ಕೂ ಗ್ಯಾಲರಿಯ ಮೂಲಭೂತ ಸೇವೆ ಲಭ್ಯವಾಗಿಲ್ಲ. ಬಹಳ ಮುಖ್ಯವಾಗಿ ಗ್ಯಾಲರಿಗೆ ಇರಬೇಕಾದ ಬೆಳಕಿನ ವ್ಯವಸ್ಥೆ ನಿರಾಶಾದಾಯಕ. ಈಗಾಗಲೇ ಪ್ರದರ್ಶನ ಏರ್ಪಡಿಸಿರುವ ಬಹುತೇಕ ಮಂದಿ ಇಲ್ಲಿನ ಅಸಮರ್ಪಕ ಬೆಳಕಿನ ವ್ಯವಸ್ಥೆಗೆ ರೋಸು ಹೋಗಿದ್ದಾರೆ. ಹೀಗಾಗಿಯೇ ಎಲ್ಲರೂ ಪ್ರಶ್ನೆ ಮಾಡಬೇಕಾಗಿ ಬಂದಿದೆ. ಬಾಡಿಗೆ ಕೊಟ್ಟು ಇಂತಹ ಮಂದ ಬೆಳಕಿನ ತೊಂದರೆಯನ್ನು ಯಾಕೆ ಎದುರಿಸಬೇಕು? ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಒದಗಿಸಿಕೊಡಬೇಕಾದವರು ಯಾರು?.
ಅಚ್ಚರಿಯ ಸಂಗತಿ ಏನು ಗೊತ್ತಾ? ವೆಂಕಟಪ್ಪ ಗ್ಯಾಲರಿಗಾಗಿ ಸರ್ಕಾರ ಸಲಹಾ ಮಂಡಳಿಯೊಂದನ್ನು ರೂಪಿಸಿದೆ. ಈ ಸಮಿತಿಯಲ್ಲಿ ಅನುಭವಿ ಕಲಾವಿದರು, ಕಲಾ ಇತಿಹಾಸಕಾರರು, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಇದ್ದಾರೆ. ಅಷ್ಟೇ ಏಕೆ, ಕಳೆದ 10 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಫೋರಂ ಸದಸ್ಯರೂ ಈ ಸಮಿತಿಯಲ್ಲಿದ್ದಾರೆ. ಆದರೆ, ಗ್ಯಾಲರಿಗೆ ಇರಬೇಕಾದ ಮೂಲಭೂತ ವ್ಯವಸ್ಥೆಯನ್ನು ಇವರ್ಯಾರೂ ಪ್ರಶ್ನಿಸಲೇ ಇಲ್ಲವೆ? ಗೊತ್ತಿದ್ದೂ ನಮಗ್ಯಾಕೆ ಎಂದು ಸುಮ್ಮನಾಗಿದ್ದಾರೆಯೇ? ಅಥವಾ ಸಲಹಾ ಸಮಿತಿ ಸದಸ್ಯರ ಸಲಹೆಗಳನ್ನು ಅಧಿಕಾರಿಗಳು ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಖಾಸಗಿ ಸಂಸ್ಥೆ ನಿರ್ಲಕ್ಷಿಸುತ್ತಿದೆಯೇ ಎನ್ನುವುದು ಕಲಾ ಸಮುದಾಯಕ್ಕೆ ಗೊತ್ತಾಗಬೇಕಿದೆ. ನವೀಕೃತ ಗ್ಯಾಲರಿ ಉದ್ಘಾಟನೆಯಾಗಿ ಅರ್ಧ ವರ್ಷವೇ ಕಳೆಯಿತಾದರೂ ಈ ವ್ಯವಸ್ಥೆ ಯಾಕೆ ಹೀಗಿದೆ? ಗ್ಯಾಲರಿಯ ಕುಂದು ಕೊರತೆಗಳ ಮೇಲೆ ನಿಗಾ ಇಡಬೇಕೆನ್ನುವ ಕಾರಣಕ್ಕಾಗಿ ಕ್ಯುರೇಟರ್ ಹುದ್ದೆ ಸೃಷ್ಟಿಸಲಾಗಿದೆ. ಈ ಹುದ್ದೆಗೆ ಒಬ್ಬರ ನೇಮಕವೂ ಆಗಿದೆ. ಆದರೂ, ಈ ಮೂಲಭೂತ ಕೊರತೆಗೇಕೆ ಪರಿಹಾರ ಸಿಕ್ಕಿಲ್ಲ? ಕ್ಯುರೇಟರ್ ಜವಾಬ್ದಾರಿ ಏನೆನ್ನುವುದನ್ನಾದರೂ ಆಡಳಿತ ವ್ಯವಸ್ಥೆ ಸ್ಪಷ್ಟಪಡಿಸಬೇಕು. ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿ ಸುಮ್ಮನ್ನಾಗುವುದು ಖಂಡಿತ ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಕೊಡಬೇಕಿದೆ. ಅಷ್ಟೇ ಅಲ್ಲ, ಸಲಹಾ ಸಮಿತಿ ಸದಸ್ಯರು ಈ ಬಗ್ಗೆ ಹೆಚ್ಚಿನ ಆಸಕ್ತಿ ಕೊಡಬೇಕಿದೆ. ಇದು ಸಾಧ್ಯವಾಗುವುದಿಲ್ಲ ಎನ್ನುವುದಾದರೆ ಆ ಜವಾಬ್ದಾರಿಯುತ ಹುದ್ದೆಯಲ್ಲಿ ಮುಂದುವರಿಯುವುದೂ ಪ್ರಶ್ನಾರ್ಹ. ಸಮಿತಿ ತಟಸ್ಥ ಸದಸ್ಯರೆನಿಸಿಕೊಳ್ಳದೇ ಇದ್ದಾಗ ಮಾತ್ರ ಈ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಾದೀತು. ಸಲಹಾ ಸಮಿತಿ ಸಲಹೆಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಅಧಿಕಾರಿಗಳು ಕೊಡುತ್ತಿಲ್ಲ ಎನ್ನುವುದಾದರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ. ಸಂಬಂಧಪಟ್ಟ ಸಚಿವರ ಗಮನವನ್ನೂ ಸೆಳೆಯುವುದು ಜವಾಬ್ದಾರಿ ಆಗಿರುತ್ತದಲ್ಲವೆ? ಕಲಾವಿದರು, ಕಲಾಸಮುದಾಯ ಬಗ್ಗೆ ಗೌರವ, ಆಸಕ್ತಿ ಹೊಂದಿರುವ ಸಚಿವರು ಇದಕ್ಕೊಂದು ಪರಿಹಾರ ಸೂಚಿಸಬಲ್ಲರು ಎಂದು ಭಾವಿಸೋಣ. ಓಕೆ ಅದೆಲ್ಲಾ ಸರಿ, ‘ವಾದ 50 ವಾಗ್ವಾದ 10’ ಪ್ರದರ್ಶನ ಹೇಗಿತ್ತು ಹೇಳದಿದ್ದರೆ ಹೇಗೆ. ಹೇಳಲೇಬೇಕು, ಕಾರಣ ಇದೊಂದು ವಿಭಿನ್ನ ಪ್ರದರ್ಶನ. ಒಂದರ್ಥದಲ್ಲಿ ಸಂದರ್ಭೋಚಿತವೂ ಆಗಿತ್ತು. ವೆಂಟಕಪ್ಪ ಆರ್ಟ್ ಗ್ಯಾಲರಿಗಾಗಿ ನಡೆದ ಹೋರಾಟದ ಕುರಿತಾದ ದಾಖಲೆಗಳು ಆಸಕ್ತಿಯಿಂದ ಕೂಡಿದ್ದವು. 1974ರ ಸಂದರ್ಭದಲ್ಲಿ ವೆಂಕಟಪ್ಪನವರು ಕಲಾಗ್ಯಾಲರಿ ಆಗಬೇಕು ಎಂದು ಆಗ್ರಹಿಸಿದ ಹೇಳಿಕೆಯೊಂದರ ಪತ್ರಿಕಾ ಪ್ರಕಟಣೆಯೂ ಪ್ರದರ್ಶನದಲ್ಲಿತ್ತು. ಇದು ಗ್ಯಾಲರಿ ಬಗ್ಗೆ ಆಸಕ್ತಿ ತೋರದ ವ್ಯಕ್ತಿಗಳ, ಅಧಿಕಾರಿಗಳ ಮುಖಕ್ಕೆ ಸ್ವತಃ ವೆಂಕಟಪ್ಪನವರೇ ಬಂದು ಹಿಡಿದಿದ್ದರೆ ಹೇಗಿರುತ್ತಿತ್ತು ಅನಿಸಿತು. ವೆಂಕಟಪ್ಪನವರ ಉದ್ದೇಶಕ್ಕೆ ವಿರುದ್ಧವಾಗಿ ಹೋಗುವ ಬೆಳವಣಿಗೆಗಳನ್ನು ನೆನಪಿಸಿದವು. ಗ್ಯಾಲರಿ ಇತಿಹಾಸ ಗೊತ್ತಿರದವರಿಗೆ ಸಂಗ್ರಹಯೋಗ್ಯ ಪ್ರದರ್ಶನ ಇದಾಗಿತ್ತು. ಪ್ರದರ್ಶನ ಹಿನ್ನೆಲೆಯಲ್ಲಿ ಫೋರಂ ಸಾಕಷ್ಟು ಕಾರ್ಯಕ್ರಮಗಳನ್ನೂ ನಡೆಸಿತು.
ಕಡೆಯದಾಗಿ ಒಂದು ಮಾತನ್ನು ಹೇಳಬೇಕೆನಿಸುತ್ತಿದೆ. ವೆಂಕಟಪ್ಪ ಆರ್ಟ್ ಗ್ಯಾಲರಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಷವೆಲ್ಲ ಕಾರ್ಯಕ್ರಮವನ್ನು ಆಯೋಜಿಸಲು ಚಿಂತಿಸಬೇಕಿದೆ. ಇದೊಂದು ಸುಸಂದರ್ಭವೂ ಹೌದು. ನಾಡಿನ ಅನೇಕ ಕಲಾವಿದರು ವೆಂಕಟಪ್ಪ ಆರ್ಟ್ ಗ್ಯಾಲರಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ಮರೆಯದೇ ಈ ಸಂದರ್ಭದಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ಆಯೋಜಿಸುವುದು ಒಳಿತು.
