- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಅರಬ್ಬರಿಂದ ಯೂರೋಪಿಯನ್ನರವರೆಗೂ ಎಲ್ಲರೂ ತಮ್ಮ ಧರ್ಮ ಪ್ರಸಾರಕ್ಕಾಗಿ ಜಗತ್ತಿನ ಮೂಲ ನಾಗರಿಕತೆಗಳ, ಸಂಸ್ಕೃತಿಗಳ ಹರಣ ಮಾಡಿ, ತಮ್ಮ ಹಕ್ಕು ಸ್ಥಾಪಿಸಿದರು. ಅಂತೆಯೇ ಭಾರತದಲ್ಲಿಯೂ ವ್ಯಾಪಾರದ ನೆಪದಲ್ಲಿ ಬಂದು ಇಲ್ಲಿಯ ಮೂಲ ಧರ್ಮಕ್ಕೆ ಕೊಡಲಿ ಪೆಟ್ಟುಹಾಕುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಭಾರತದಲ್ಲಿರುವ ಬಹುತೇಕರು ವಲಸಿಗ ಜನರಲ್ಲ, ಅವರು ಭಾರತೀಯರೇ… ಆದರೇ ಪರಿಸ್ಥಿತಿ, ಅನುಕೂಲ, ಅಸ್ಪೃಶ್ಯತೆ, ಹಣದ ಆಮಿಷದಂತದ ಹಲವು ಕಾರಣಗಳಿಗಾಗಿ ಮತಾಂತರ ಹೊಂದಿದ್ದಾರೆ. ಭಾರತೀಯ ಮೂಲದ ಧರ್ಮಗಳಲ್ಲಿನ ಅಸ್ಪೃಶ್ಯತೆ ನಿವಾರಣೆಗಾಗಿಯೇ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ವಿದೇಶೀ ಧರ್ಮಗಳಿಗೆ ಮತಾಂತರವಾದ ನಂತರವೂ ಮೀಸಲಾತಿಯ ಲಾಭ ಪಡೆಯುತ್ತಿದ್ದವರಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನಮೋಹನ್ ಅವರ ಸುಪ್ರೀಂಕೋರ್ಟ್ ಪೀಠವು ಕ್ರಿಶ್ಚಿಯನ್ ಧರ್ಮಕ್ಕೆ (ಹಿಂದೂ ಧರ್ಮ, ಸಿಖ್ ಅಥವಾ ಬೌದ್ಧ ಧರ್ಮದ ಹೊರಗಿನ ಯಾವುದೇ ಧರ್ಮ) ಮತಾಂತರವು 1950ರ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶದ ಷರತ್ತು 3ರ ಅಡಿಯಲ್ಲಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ತಕ್ಷಣ ಮತ್ತು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ ಎಂದು ತೀರ್ಪು ನೀಡಿದೆ. ಈ ಸಂಬಂಧ ಜಾಲತಾಣದಲ್ಲಿ ತರಹೇವಾರಿ ಚರ್ಚೆಗಳು ಏರ್ಪಟ್ಟಿವೆ.
ಈ ವಿಷಯವಾಗಿ ವಿವಿಧ ಹ್ಯಾಶ್ಟ್ಯಾಗ್ಗಳೊಂದಿಗೆ X.Comನಲ್ಲಿ 2 ಲಕ್ಷಕ್ಕೂ ಅಧಿಕ ಟ್ವೀಟ್ಗಳು ದಾಖಲಾಗಿ, #DalitConversion – 90K, #SupremeCourt, #ConstitutionUpheld, #DalitCristians ಸೇರಿದಂತೆ ವಿವಿಧ ಹ್ಯಾಶ್ಟ್ಯಾಗ್ನೊಂದಿಗೆ 8 ಕೋಟಿ ಜನರಿಗೆ ತಲುಪಿದೆ. ಇನ್ನೂ ಯೂಟ್ಯೂಬ್ನಲ್ಲಿ 4200ಕ್ಕೂ ಅಧಿಕ ವಿವಿಧ ನ್ಯೂಸ್ ಚಾನೆಲ್ ಮತ್ತು ಯೂಟ್ಯೂಬರ್ ವಿಡಿಯೋಗಳು ದಾಖಲಾಗಿವೆ. ವಾಟ್ಸಾಪ್ನಲ್ಲಿ 50M ಮೆಸೇಜ್ ಹರಿದಾಡಲ್ಪಿಟ್ಟಿವೆ ಮತ್ತು ಇನ್ಸ್ಟಾಗ್ರಾಮ್ನಲ್ಲಿ 28K ಗೂ ಅಧಿಕ ಚಿತ್ರ ಮತ್ತು ವಿಡಿಯೋ ತುಣುಕುಗಳು ಹರಿದಾಡಲ್ಪಟ್ಟಿವೆ.
ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು “ಡಾ. ಅಂಬೇಡ್ಕರ್ ರಚಿತ ಸಂವಿಧಾನವು ಅಪೇಕ್ಷಿಸಿದ್ದನ್ನೇ ಸುಪ್ರೀಂಕೋರ್ಟ್ ಇಂದು ಪುನರುಚ್ಚರಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಮಚಂದ್ರ ರಾವ್ ಅವರು, “ಸುಪ್ರೀಂಕೋರ್ಟ್ ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಎತ್ತಿ ಹಿಡಿದಿದೆ. ಇದು ಸಂವಿಧಾನದ ಸ್ಫೂರ್ತಿಗೆ ಸಿಕ್ಕ ಐತಿಹಾಸಿಕ ವಿಜಯ. ಮತಾಂತರಗೊಂಡ ನಂತರ ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದು ಸಂವಿಧಾನಬಾಹಿರವಾಗಿದೆ” ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು, “ಚರ್ಚ್ ಅಥವಾ ಮಸೀದಿಗೆ ಪ್ರವೇಶಿಸಿದಾಗ ಜಾತಿ ಆಧಾರಿತ ತಾರತಮ್ಯ ಮಾಯವಾಗುವುದಿಲ್ಲ. ಈ ತೀರ್ಪು ಕಾನೂನುಬದ್ಧವಾಗಿ ಎಷ್ಟೇ ಉತ್ತಮವಾಗಿದ್ದರೂ ಸಾಮಾಜಿಕ ವಾಸ್ತವದೊಂದಿಗೆ ತೊಡಗಿಸಿಕೊಳ್ಳಲು ವಿಫಲವಾಗಿದೆ. ಸಂಸತ್ತು 1950ರ ಆದೇಶವನ್ನು ತುರ್ತಾಗಿ ತಿದ್ದುಪಡಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ. ಅಂತೆಯೇ ಕ್ರಿಶ್ಚಿಯನ್ ಹಕ್ಕುಗಳ ಹೋರಾಟಗಾರ ಜಾನ್ ದಯಾಳ್, “ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂ ದಲಿತರು ಎಸ್ಸಿ ಸ್ಥಾನಮಾನವನ್ನು ಉಳಿಸಿಕೊಳ್ಳುತ್ತಾರೆ. ಆದರೇ ಕ್ರಿಶ್ಚಿಯನ್/ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಮೀಸಲಾತಿ ಯಾಕಿಲ್ಲ? ಇದು ಜಾತ್ಯತೀತ ಭಾರತವೇ?” ಎಂದು ಪ್ರಶ್ನಿಸಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಡಿ.ವಿ.ಎಸ್.ಎಸ್. ಸೋಮಯಾಜುಲು ಅವರು, “ಹಿಂದೂ ಜಾತಿ ವ್ಯವಸ್ಥೆಯ ಅಂಗವೈಕಲ್ಯಗಳನ್ನು ಎದುರಿಸುವವರಿಗಾಗಿ ಅಂಬೇಡ್ಕರ್ ಅವರು ಎಸ್ಸಿ/ಎಸ್ಟಿ ಕಾಯ್ದೆಯನ್ನು ವಿನ್ಯಾಸಗೊಳಿಸಿದ್ದಾರೆ.
ಒಮ್ಮೆ ನೀವು ಸ್ವಯಂಪ್ರೇರಣೆಯಿಂದ ಮತಾಂತರದ ಮೂಲಕ ಆ ವ್ಯವಸ್ಥೆಯನ್ನು ತೊರೆದರೆ, ಈ ರಕ್ಷಣೆಗಳಿಗೆ ಕಾನೂನು ಆಧಾರವು ತಾರ್ಕಿಕವಾಗಿ ನಿಮ್ಮನ್ನು ಅನುಸರಿಸಲು ಸಾಧ್ಯವಿಲ್ಲ. ನ್ಯಾಯಾಲಯವು ಅಸ್ತಿತ್ವದಲ್ಲಿರುವ ಕಾನೂನನ್ನು ಸರಿಯಾಗಿ ಅನ್ವಯಿಸಿದೆ” ಎಂದಿದ್ದಾರೆ. ಜೊತೆಗೆ ಚೆನ್ನೈನ ಟೆಕ್ಕಿ @shankar_mds ಅವರು “If you convert to a religion that says- ‘all are equal in Christ’ then you’ve left the caste system. Good for you! But you cannot then use the caste system’s provisions to benefit yourself. You can’t have it both ways. Sorry but SC is right” ಎಂದಿದ್ದಾರೆ.
