- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡ ಈ ಬಾರಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಒಟ್ಟು 20 ದೇಶದ ತಂಡಗಳು ಭಾಗವಹಿಸಿದ್ದ ಟೂರ್ನಿ ಇದುವರೆಗೂ ನಡೆದ ಐಸಿಸಿ ನೇತೃತ್ವದ ಕ್ರಿಕೆಟ್ನ ಅತಿದೊಡ್ಡ ಡಿಜಿಟಲ್ ಈವೆಂಟ್ ಆಗಿದೆ. ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್ಬುಕ್ ಮತ್ತು ರೆಡ್ಡಿಟ್ನಾದ್ಯಂತ ಜಾಗತಿಕವಾಗಿ ಹೆಚ್ಚು ಚರ್ಚಿಸಲ್ಪಟ್ಟ ಕ್ರೀಡಾಕೂಟಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಪಂದ್ಯಾವಳಿಯಾದ್ಯಂತ ಲಕ್ಷಾಂತರ ಪೋಸ್ಟ್ ಗಳು, ಮೀಮ್ಸ್ ಗಳು ಮತ್ತು ತಜ್ಞರ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಿ ತುಳುಕುತ್ತಿದ್ದವು. ಪಾಕಿಸ್ತಾನದ ಲೀಗ್ ಹಂತದ ಪಂದ್ಯ, ಇಂಗ್ಲೆಂಡ್ನ ಸೆಮಿಫೈನಲ್ ಹಾಗೂ ನ್ಯೂಜಿಲೆಂಡ್ನ ಫೈನಲ್ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟು ದಾಖಲೆ ಬರೆದಿವೆ.
ಅಚ್ಚರಿ ಎಂಬಂತೆ ಜಿಂಬಾಂಬ್ವೆ ತಂಡವು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿ 8ರ ಘಟ್ಟಕ್ಕೆ ತಲುಪಿತ್ತು. ಹೊಸ ತಂಡಗಳಾಗಿ ಸೇರಿದ್ದ ಅಮೆರಿಕ, ಇಟಲಿ, ಕೆನಡಾ, ನಮೀಬಿಯಾ, ನೇಪಾಳ, ಓಮನ್, ಯು.ಎ.ಇ ತಂಡಗಳಿಗೆ ದಿಗ್ಗಜರೆನಿಸಿದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಜ್, ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳೊಂದಿಗೆ ಆಡುವ ಅವಕಾಶ ದೊರೆತಿತ್ತು. ತನ್ನ ಮೊಂಡುತನದಿಂದ ಟೂರ್ನಿಯಿಂದ ಹೊರನಡೆದ ಬಾಂಗ್ಲಾದೇಶದ ನಡೆಯು ಜಗತ್ತಿನಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಜೊತೆಗೆ ಟೂರ್ನಿಯು ಯಾವುದೇ ವಾದ-ವಿವಾದಗಳಿಲ್ಲದೆ ಬಹುತೇಕ ಶಾಂತವಾಗಿ ಜರುಗಿತು.
ಟೂರ್ನಿಯ ವಿಷಯವಾಗಿ ಜಾಲತಾಣ ವೈರಲ್ ಮೋಡ್ನಲ್ಲೇ ಇತ್ತು. ವಿಶ್ವಕಪ್ ಪಂದ್ಯಾವಳಿಯ ವಿಷಯವು ಜಾಲತಾಣದಲ್ಲಿ 8.5+ ಕೋಟಿ ಜನರಿಂದ ಬಳಸಲ್ಪಟ್ಟಿದೆ. ಲೈಕ್, ಶೇರ್, ಕಾಮೆಂಟ್ ಎಲ್ಲ ಸೇರಿ 86 ಕೋಟಿ ಜನರಿಂದ ಬಳಸಲ್ಪಟ್ಟಿದ್ದರೆ, #T20WorldCup ಬರೋಬ್ಬರಿ 4 ಕೋಟಿ ಜನರಿಂದ ಬಳಸಲ್ಪಟ್ಟಿದೆ ಮತ್ತು ದಾಖಲೆ ಎಂಬಂತೆ ಎಲ್ಲ ಪಂದ್ಯಗಳ ವಿಡಿಯೋ ವೀಕ್ಷಣೆ 10 ಬಿಲಿಯನ್ಗೂ ಅಧಿಕವಾಗಿದೆ. ಸಂಜು ಸ್ಯಾಮ್ಸನ್, ಬುಮ್ರಾ, ಅಭಿಷೇಕ್ ಮತ್ತು ಫಿನ್ ಅಲೆನ್ ಜಾಲತಾಣದಲ್ಲಿ ಅತಿಹೆಚ್ಚು ಚರ್ಚೆಗೆ ಒಳಪಟ್ಟ ಆಟಗಾರರಾಗಿದ್ದಾರೆ.
3ನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡ ಭಾರತದ ಕುರಿತು ಕ್ರಿಕೆಟ್ ದಿಗ್ಗಜರು ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಚಿನ್ ತೆಂಡೂಲ್ಕರ್ Outstanding performance by Team India ಎಂದರೆ, ಕಪಿಲ್ ದೇವ್ India played fearless cricket throughout the tournament. This is the future of T20 ಎಂದಿದ್ದಾರೆ. ಸುನಿಲ್ ಗವಾಸ್ಕರ್ This Indian team has the balance that every champion side needs ಎಂದರೆ, ರಿಕಿ ಪಾಂಟಿಂಗ್ India’s aggressive batting template has changed T20 cricket ಎಂದಿದ್ದಾರೆ. ಅನಿಲ್ ಕುಂಬ್ಳೆ Winning tournaments requires great bowling, and India showed exactly that ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವೀರೇಂದ್ರ ಸೆಹ್ವಾಗ್ Bumrah is simply unstoppable. What a champion performance ಎಂದು ಹೊಗಳಿದ್ದಾರೆ. ಗೂಗಲ್ನ ಸಿಇಒ ಸುಂದರ್ ಪಿಚೈ Congrats India on winning the ICC Men’s T20 World Cup, what an atmosphere ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಕೋಚ್ ಗೌತಮ್ ಗಂಭೀರ್ Milestones don’t matter, trophies do ಎಂದರೆ, ನ್ಯೂಜಿಲ್ಯಾಂಡ್ ಕೋಚ್ ರಾಬ್ ವಾಲ್ಟೇರ್ the young team would come back stronger in the 2028 World Cup ಎಂದು ಮುಂದಿನ ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆಲುವಿನ ಬಳಿಕ ನಾಯಕ ಸೂರ್ಯಕುಮಾರ್ ಕಪ್ನೊಂದಿಗೆ ಹನುಮಂತನ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಕಪ್ಪನ್ನು ಮಸೀದಿ, ಚರ್ಚ್ ಗೂ ತೆಗೆದುಕೊಂಡು ಹೋಗಬೇಕಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಒಳಪಟ್ಟಿದ್ದು, ಹರ್ಭಜನ್ ಸಿಂಗ್ ಪ್ರತ್ಯುತ್ತರ ನೀಡಿ ಎಲ್ಲ ಧರ್ಮಗಳ ಪ್ರಾರ್ಥನಾ ಸ್ಥಳಗಳಲ್ಲಿ ದೇವರು ಇರುತ್ತಾರೆ, ದೇವರಲ್ಲಿ ಭೇದ ಯಾಕೆ ಎಂದರೆ, ಇಶಾನ್ ಕಿಶನ್ ಇದೊಂದು ಯೂಸ್ಲೆಸ್ ಪ್ರಶ್ನೆ ಎಂದು ಜರಿದಿದ್ದಾರೆ.
