ಪೂರ್ವೋತ್ತರದ 8 ರಾಜ್ಯಗಳ ಭೌಗೋಳಿಕತೆ, ಸಂಸ್ಕೃತಿ, ಮಹತ್ವ ಹಾಗೂ ಸವಾಲು
- ಮಂಜುನಾಥ ಮಂಗಲಗಿ,
ಪೂರ್ವೋತ್ತರ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಿಲಚರ್, ಅಸ್ಸಾಂ
ಭಾರತೀಯ ಸಂಸ್ಕೃತಿಯಲ್ಲಿ ಈಶಾನ್ಯ ದಿಕ್ಕಿಗೆ ವಿಶೇಷ ಮಹತ್ವವಿದೆ. ದೇವತೆಗಳ ವಾಸಸ್ಥಾನ ಕೂಡ ಈಶಾನ್ಯ ದಿಕ್ಕಿನಲ್ಲಿಯೇ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ದೇಶದ ಭೌಗೋಳಿಕ ನಕ್ಷೆಯಲ್ಲಿ ‘ಚಿಕನ್ ನೆಕ್’ ಎಂದೇ ಕರೆಯಲ್ಪಡುವ ಬಂಗಾಳದ ಸಿಲಿಗುರಿಯಿಂದ ಪ್ರವೇಶಿಸುವ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯ ರಾಜ್ಯಗಳನ್ನು ಈಶಾನ್ಯ ಪ್ರದೇಶಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಸಪ್ತ ಸಹೋದರಿಯರ ರಾಜ್ಯ ಎಂದು ಕರೆಯುವ ಜೊತೆಗೆ ಸಿಕ್ಕಿಂ ಅನ್ನು ಸೇರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಷ್ಟಲಕ್ಷ್ಮಿಯರೆಂದು ಈಗ ಕರೆಯುತ್ತಿದ್ದಾರೆ.
ಪೂರ್ವಾಂಚಲದಲ್ಲಿ ಒಟ್ಟು ಎಂಟು (7+1) ರಾಜ್ಯಗಳಿವೆ. ಈ ಪ್ರದೇಶವು 210ಕ್ಕೂ ಹೆಚ್ಚು ಬುಡಕಟ್ಟು ಜನಜಾತಿಗಳಿಂದ ಕೂಡಿದೆ. ಪ್ರತಿಯೊಂದು ಜನಜಾತಿಗೆ ತನ್ನದೇ ಆದ ಭಾಷೆ, ವೇಷ-ಭೂಷಣ, ಉಡುಗೆ-ತೊಡುಗೆ, ಸಂಸ್ಕೃತಿ, ಆಚರಣೆ, ನಂಬಿಕೆ, ಕಲೆ, ಸಂಗೀತ, ನೃತ್ಯ ಮತ್ತು ಹಾಡು ಮುಂತಾದ ವಿಶಿಷ್ಟತೆಗಳಿವೆ. ಇದಾಗ್ಯೂ ಕೂಡ ಇವರೆಲ್ಲರ ಜೀವನ, ಆಚರಣೆಗಳು ಮತ್ತು ಸಂಪ್ರದಾಯಗಳು ಒಂದೇ ಎಂದು ನಿಸ್ಸಂಶಯವಾಗಿ ಕಾಣಿಸುತ್ತದೆ. ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದಲೂ ಪೂರ್ವಾತ್ತರ ತುಂಬಾ ಮಹತ್ವದ್ದಾಗಿದ್ದು ಇದು ಚೀನಾ, ನೇಪಾಳ, ಭೂತಾನ್, ಟಿಬೆಟ್, ಮಯನ್ಮಾರ್ ಮತ್ತು ಬಾಂಗ್ಲಾದೇಶಗಳಿಂದ ಸುತ್ತುವರಿದಿದೆ.
ಯುದ್ಧಗಳು
ಈ ಗಡಿಪ್ರದೇಶವು ಐತಿಹಾಸಿಕವಾಗಿ ಹಲವು ಯುದ್ಧಗಳಿಗೆ ಸಾಕ್ಷಿಯಾಗಿದೆ. 1962ರಲ್ಲಿ ನಡೆದ ಭಾರತ-ಚೀನಾ ಯುದ್ಧ ಮತ್ತು 1971ರಲ್ಲಿ ನಡೆದ ಭಾರತ-ಪೂರ್ವ ಪಾಕಿಸ್ತಾನ (ಬಾಂಗ್ಲಾ) ಯುದ್ಧಗಳು ಇದೇ ಪ್ರದೇಶಗಳಲ್ಲಿ ನಡೆದಿವೆ. ಇತ್ತೀಚೆಗೆ 2017ರಲ್ಲಿ ನಡೆದ ಡೋಕ್ಲಾಮ್ ಘರ್ಷಣೆ ಹಾಗೂ ಚೀನಾ ಆಗಾಗ ಅರುಣಾಚಲ ಗಡಿಪ್ರದೇಶದಲ್ಲಿ ತೆಗೆಯುವ ಕ್ಯಾತೆಗಳೆಲ್ಲವೂ ಇಲ್ಲಿಯೇ ನಡೆದಿವೆ. ಪೌರಾಣಿಕ ಹಿನ್ನೆಲೆಯಲ್ಲಿ ನೋಡಿದರೆ, ಹರಿಹರರ ಯುದ್ಧವಾದ ತೇಜಪುರ ಕೂಡ ಇಲ್ಲೇ ಇದೆ.
ಈ ಪ್ರದೇಶದಲ್ಲಿರುವ ಶಕ್ತಿಪೀಠಗಳು
ಈಶಾನ್ಯ ಭಾರತವು ಪೌರಾಣಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಪಾರ್ವತಿ ದೇವಿಯ (ಸತಿ) ಶಕ್ತಿಪೀಠಗಳಾದ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ, ತ್ರಿಪುರದ ತ್ರಿಪುರೇಶ್ವರಿ ಮತ್ತು ಮೇಘಾಲಯದ ಜಯಂತಿ ಹಿಲ್ನಲ್ಲಿರುವ ಜಯಂತಿ ದೇವಿ ಹೀಗೆ ಒಟ್ಟು ಮೂರು ಶಕ್ತಿಪೀಠಗಳು ಇಲ್ಲಿವೆ. ಜ್ಯೋತಿಷಿಗಳು ನಂಬುವ ನವಗ್ರಹ ಮಂದಿರ ಹಾಗೂ ವಸಿಷ್ಠ ಮುನಿಗಳ ವಸಿಷ್ಠ ಆಶ್ರಮ ಅಂತೆಯೇ ಬ್ರಹ್ಮಪುತ್ರ ನದಿಯ ನಡುವಿನ ದ್ವೀಪದಲ್ಲಿರುವ ಅತಿಚಿಕ್ಕ ದೇವಾಲಯವಾದ ಉಮಾನಂದ ಮಂದಿರ ಗುವಾಹಟಿಯಲ್ಲಿದೆ. ಪರಶುರಾಮನು ತನ್ನ ಕೊಡಲಿಯನ್ನು ತೊಳೆದ ಅರುಣಾಚಲ ಪ್ರದೇಶದ ಲೋಹಿತ್ ನದಿಯ ಪರಶುರಾಮಕುಂಡ, ಕೃಷ್ಣ ಮತ್ತು ರುಕ್ಮಿಣಿ ವಿವಾಹವಾಗಿ ಪಾರ್ವತಿ ದೇವಿಯ ಆಶೀರ್ವಾದ ಪಡೆದ ಮಾಲಿನಿಥಾನ್ (Malinithan) ಸಿದ್ದೇಶ್ವರ ಉದ್ಭವಲಿಂಗ ಅರುಣಾಚಲ ಪ್ರದೇಶದಲ್ಲಿದೆ. ಮಹಾಭಾರತದ ಭೀಮನು ಚದುರಂಗ ಆಡಿದ ದಿಮಾಪುರ್ ನಾಗಾಲ್ಯಾಂಡ್ನಲ್ಲಿದೆ. ಏಷ್ಯಾದ ಅತ್ಯಂತ ಹಳೆಯ ಬೌದ್ಧವಿಹಾರ ಅಸ್ಸಾಂನಲ್ಲಿದೆ. ಶ್ರೀಕೃಷ್ಣನ ಗೋವಿಂದ ಮಂದಿರ ಮಣಿಪುರದಲ್ಲಿದೆ ಮತ್ತು 30 ಅಡಿ ಎತ್ತರದ ಶಿವನ ತಲೆ ತ್ರಿಪುರದ ಉನಕೋಟಿಯಲ್ಲಿದೆ.
ಲಚಿತ್ ಬರ್ಫುಕಾನ್
ಪೂರ್ವೋತ್ತರವನ್ನು ಅಜೇಯ ಪೂರ್ವೋತ್ತರ (Invincible NE) ಎಂದೇ ಕರೆಯಲಾಗುತ್ತದೆ. ಏಕೆಂದರೆ, 23 ಬಾರಿ ಸೋತ ಮೊಘಲರಿಗೆ ಅಸ್ಸಾಮನ್ನು (ಈಗಿನ ಒಟ್ಟು ಈಶಾನ್ಯ ಪ್ರದೇಶ) ಎಂದಿಗೂ ತಮ್ಮ ಅಧೀನಕ್ಕೆ ಪಡೆಯಲು ಆಗಲಿಲ್ಲ. ಅಹೋಂ ಸಾಮ್ರಾಜ್ಯದ ಮಹಾನ್ ಸೇನಾಧಿಪತಿ ಲಚಿತ್ ಬಡಫುಕನ್ ಶತ್ರುಗಳನ್ನು ಎಂದಿಗೂ ಬ್ರಹ್ಮಪುತ್ರ ನದಿ ದಾಟಲು ಬಿಡಲಿಲ್ಲ. ಬ್ರಹ್ಮಪುತ್ರ ನದಿಯ ಮೇಲೆ ನಡೆದ ಸರಾಯ್ ಘಾಟ್ ಯುದ್ಧವು ಲಚಿತ್ನ ಶೌರ್ಯಗಾಥೆಯನ್ನು ಹೇಳುತ್ತದೆ. ಅಸ್ಸಾಂನ ರಕ್ಷಣೆಗೆ ಹೋರಾಡಿದ ಆತನ ಸುಪ್ರಸಿದ್ಧ ವಾಕ್ಯವಾದ “ದೆಶೋತ್ಕೊಯ್ ಮುಮೈ ಡಾಂಗೋರ್ ನಹೊಯ್” ಅಂದರೆ ದೇಶಕ್ಕಿಂತ ನನ್ನ ಮಾವ ದೊಡ್ಡವನಲ್ಲ ಎಂದು ಹೇಳಿ ಕರ್ತವ್ಯಲೋಪವೆಸಗಿದ ಸ್ವಂತ ಮಾವನ ತಲೆಯನ್ನೇ ಕಡಿದ ಅಪ್ರತಿಮ ವೀರನಾತ. ಆತನ ಹೆಸರಿನಲ್ಲಿ ಲಚಿತ್ ಬರ್ಫುಕಾನ್ ಚಿನ್ನದ ಪದಕವನ್ನು ಪ್ರತಿವರ್ಷ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (NDA) ಅತ್ಯುತ್ತಮ ಕೆಡೆಟ್ಗೆ ನೀಡಲಾಗುತ್ತದೆ.
ಧಾರ್ಮಿಕ, ಸಾಮಾಜಿಕ ಮುಖಂಡರ ಕೊಡುಗೆ
ಸಮಾಜಸುಧಾರಕ ಶ್ರೀಮಂತ ಶಂಕರದೇವ್ ಅವರು 16ನೇ ಶತಮಾನದಲ್ಲಿ ಭಾರತ ಭ್ರಮಣ ಮಾಡಿ ಕಲೆ, ಸಾಹಿತ್ಯ, ಸಂಗೀತದ ಮೂಲಕ ಭಕ್ತಿ ಆಂದೋಳನ ಮಾಡಿದ ಮಹಾನ್ ಸಂತರು. ಇವರ ಹಾದಿಯಲ್ಲಿ ನಡೆದ ಶಿಷ್ಯ ಮಾಧವ ದೇವರಿಂದ ಈ ಪರಂಪರೆ ಮುಂದುವರಿಯಿತು. 14ನೇ ಶತಮಾನದಿಂದ 18ನೇ ಶತಮಾನದವರೆಗೆ ಸಂಸ್ಕೃತ ಭಾಷೆಯು ರಾಜ್ಯ ಭಾಷೆ ಕೂಡ ಆಗಿತ್ತು. ಸಂಸ್ಕೃತದಲ್ಲಿರುವ ಹಳೆಯ ಲಿಖಿತ ಪತ್ರಗಳು ಈಗಲೂ ಇಲ್ಲಿ ನೋಡಲು ಸಿಗುತ್ತವೆ.
ಸ್ವಾತಂತ್ರ್ಯ ಆಂದೋಳನ
ಭಾರತದ ಸ್ವಾತಂತ್ರ್ಯ ಆಂದೋಳನದಲ್ಲಿ ಪೂರ್ವಾತ್ತರದ ಪಾಲು ದೊಡ್ಡದಿದೆ. ಅಸ್ಸಾಂನ 17 ವರ್ಷದ ಕನಕಲತಾ ಬರುವಾ “ಬ್ರಿಟಷರೇ ಭಾರತ ಬಿಟ್ಟು ತೊಲಗಿ” ಆಂದೋಳನಕ್ಕೆ ಸೇರಿ, ಗೋಪುರ್ನ ಪೊಲೀಸ್ ಸ್ಟೇಷನ್ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಹೋಗಿ ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಯೊಡ್ಡಿ ಸ್ವರ್ಗ ಸೇರಿದಳು. ಇವಳಂತೆಯೇ ನಾಗಾಲ್ಯಾಂಡ್ನ ರಾಣಿ ಗಾಯ್ಡಿನ್ಲ್ಯೂ, ಅಸ್ಸಾಂನ ಮಣಿರಾಮ್ ದಿವಾನ್, ಮೇಘಾಲಯದ ಯು ಕಿಯಾಂಗ್ ನಾಂಗ್ಬಾ, ಅಸ್ಸಾಂನ ಕುಶಲ್ ಕೊನ್ವರ್, ಮೇಘಾಲಯದ ಪಾ ಟೋಗನ್ ನೆಂಗ್ಮಿಂಜಾ, ಅರುಣಾಚಲದ ಮೋಜಿ ರಿಬಾ, ಮಿಜೋರಾಂನ ರಾಣಿ ರೋಪ್ಯುಲಿಯಾನಿ ಮತ್ತು ಪಸಾಲ್ಥಾ ಖುವಾಂಗ್ಚೆರಾ- ಮತ್ಮುರ್ ಜಾಮೋ, ಅಸ್ಸಾಂನ ಗೋಪಿನಾಥ್ ಬೊರ್ಡೊಲೊಯ್, ಮಣಿಪುರದ ಬೀರ್ ಟಿಕೇಂದ್ರಜಿತ್, ಹೈಪೌ ಜಾದೋನಾಂಗ್ ಹೀಗೆ ಅನೇಕರು ಸ್ವಾತಂತ್ರ್ಯ ಆಂದೋಳನದಲ್ಲಿ ಭಾಗವಹಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಐಎನ್ಎ (INA) ಮೊದಲ ಬಾರಿಗೆ ಭಾರತದಲ್ಲಿ ಧ್ವಜಾರೋಹಣ ಮಾಡಿದ ಸ್ಥಳ ಮಣಿಪುರದ ಮೊಯ್ರಾಂಗ್ನಲ್ಲಿದೆ. ನೇತಾಜಿಯ ಜೊತೆ ಐಎನ್ಎಯಲ್ಲಿ ಕಾರ್ಯನಿರ್ವಹಿಸಿದ ಅನೇಕರು ಪೂರ್ವೋತ್ತರದಿಂದ ಬಂದವರಾಗಿದ್ದಾರೆ.
ಪೂರ್ವಾಂಚಲವನ್ನು ಕಾಡುತ್ತಿರುವ ಸಮಸ್ಯೆಗಳೂ ಹಲವಾರು ಮುಖಗಳಲ್ಲಿವೆ…





ಮತಾಂತರ ಸಮಸ್ಯೆ
1836ರಲ್ಲಿ ಅಮೆರಿಕನ್ ಬ್ಯಾಪ್ಟಿಸ್ಟ್ ಮಿಷನ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತವಾಗಿ ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿತು. ಸ್ವಾತಂತ್ರ್ಯಕ್ಕೆ ಮುಂಚೆ 1931-1951ರ ಅವಧಿಯಲ್ಲಿ ಅತಿ ಹೆಚ್ಚು ತೀವ್ರಗತಿಯಲ್ಲಿ ಮತಾಂತರ ಮಾಡಲಾಗಿತ್ತು. ಬುಡಕಟ್ಟು ಪ್ರದೇಶದಲ್ಲಿ 1921ರಲ್ಲಿ ಶೇ.30ರಷ್ಟಿದ್ದ ಮತಾಂತರ ಪ್ರಮಾಣವು 1931ರಲ್ಲಿ ಶೇ.50ಕ್ಕೆ ಹಾಗೂ 1951ರಲ್ಲಿ ಶೇ.91ರವರೆಗೂ ಹೆಚ್ಚಿತ್ತು. ಇದರ ಪ್ರಭಾವ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿಯೂ ಕಂಡಿತ್ತು. ಬಂದೂಕಿನ ನಳಿಕೆ ಮುಂದೊಡ್ಡಿ ಮತಾಂತರ ಮಾಡಿದ ಉದಾಹರಣೆಗಳೂ ಇವೆ. ಶಿಲ್ಲಾಂಗ್ನ ಸೇಂಟ್ ಎಡ್ಮಂಡ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಸಮೂಹದಿಂದ 1918ರಲ್ಲಿ ಪ್ರಾರಂಭವಾದ ನಾಗಾ ಕ್ಲಬ್ ಮುಂದೆ 1946ರಲ್ಲಿ ನಾಗಾ ನ್ಯಾಷನಲ್ ಕೌನ್ಸಿಲ್ (NNC) ಆಗಿ ರೂಪಾಂತರಗೊಂಡು ಗ್ರೇಟರ್ ನಾಗಾಲ್ಯಾಂಡ್ ಬೇಡಿಕೆಯೊಂದಿಗೆ ಉಗ್ರಪಂಥ ಸಂಘಟನೆಯಾಗಿ ಕಾರ್ಯನಿರ್ವಹಿಸಿತು. NNC ಪೂರ್ವೋತ್ತರ ಭಾರತದ ಮೊದಲ ಉಗ್ರಗಾಮಿ ಸಂಘಟನೆಯಾಗಿದೆ. ಆನಂತರ ಅನೇಕ ಸಶಸ್ತ್ರ ಪ್ರತ್ಯೇಕತಾವಾದಿಗಳು ಹುಟ್ಟಿಕೊಂಡಿದ್ದು ULFA, GNLA, HNLC, NLFT, KLO, KNA, NDFBಯಂತಹ 50ಕ್ಕೂ ಹೆಚ್ಚು ಸಂಘಟನೆಗಳಿವೆ.
ಬಾಂಗ್ಲಾ ನುಸುಳುಕೋರರ ಸಮಸ್ಯೆ
ಭಾರತ ಮತ್ತು ಬಾಂಗ್ಲಾ ವಿಭಜನೆ ವೇಳೆಯಿಂದ ಇಂದಿನವರೆಗೆ 3 ಕೋಟಿಗೂ ಅಧಿಕ ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರು ಅಸ್ಸಾಂ ಮತ್ತು ಮಣಿಪುರ ರಾಜ್ಯಗಳು ಮಾತ್ರವಲ್ಲದೆ ದೇಶಾದ್ಯಂತ ವಲಸೆ ಹೋಗಿ ನೆಲೆಸಿದ್ದಾರೆ. ಓಟ್ ಬ್ಯಾಂಕ್ಗಾಗಿ ಇವರಿಗೆ ಯೋಜನಾಬದ್ಧವಾಗಿ ಆಧಾರ್ ಮತ್ತು ರೇಷನ್ಕಾರ್ಡ್, ವೋಟರ್ ಐಡಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ ಅಸ್ಸಾಂನ AIDUF ಪಾರ್ಟಿ ಬಾಂಗ್ಲಾ ಮುಸ್ಲಿಂರಿಗಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪವಿದೆ. ಅಸ್ಸಾಂನ 11 ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳಾಗಿ ಮಾರ್ಪಟ್ಟಿದ್ದು, 30 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇವರು ಪೂರ್ವಾತ್ತರ ಭಾರತದ ಅನೇಕ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿದ್ದಾರೆ. ಅಲ್ಲದೆ ದೇಶದ ಅನೇಕ ಕಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಆರ್ಥಿಕ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಅಸ್ಸಾಂ ಸೇರಿದಂತೆ ದೇಶವನ್ನೇ ಕಾಡುವ ನುಸುಳುಕೋರ ಸಮಸ್ಯೆ ವಿರುದ್ಧ ಆಂದೋಳನ (1979-85) ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಬಾಂಗ್ಲಾದೇಶ ನುಸುಳುಕೋರರ ವಿರುದ್ಧ ಪ್ರಾರಂಭವಾದ ಅಸ್ಸಾಂ ಆಂದೋಳನದ ನೇತೃತ್ವವನ್ನು ಎಎಎಸ್ಯು (AASU – All Assam Students Union) ಮತ್ತು ಎಎಜಿಎಸ್ಪಿ ವಹಿಸಿದ್ದವು. ಇದರ ಅಧ್ಯಕ್ಷರಾಗಿ ಪ್ರಫುಲ್ಲ ಕುಮಾರ್ ಮಹಂತ ಇದ್ದರು. ಈ ಆಂದೋಳನವು ಹಿಂಸಾತ್ಮಕವಾಗಿ ತಿರುಗಿ 860 ಜನರ ಮೃತ್ಯುವಿಗೆ ಕಾರಣವಾಯಿತು. ಈ ಆಂದೋಳನಕ್ಕೆ ಎಬಿವಿಪಿ ಸಂಘಟನೆಯು ಕೂಡ ಬೆಂಬಲ ನೀಡಿ, “ಇಂದು ಅಸ್ಸಾಂ ಉಳಿಸಿ, ನಾಳೆ ಭಾರತ ಉಳಿಸಿ” ಎಂದು ಘೋಷಣೆ ಕೂಗಿತ್ತು. ಎಬಿವಿಪಿ ಜೊತೆಗೆ ಸಂಘಪರಿವಾರದ ಅನೇಕ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದವು. ಅಂತಿಮವಾಗಿ ಆಗಸ್ಟ್ 15, 1985ರಲ್ಲಿ ಭಾರತದ ಪ್ರಧಾನಿ ರಾಜೀವ್ಗಾಂಧಿ ಅವರು ಅಸ್ಸಾಂ ಆಂದೋಳನದ ನಾಯಕರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದಕ್ಕೆ ‘ಅಸ್ಸಾಂ ಅಕಾರ್ಡ್’ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ ನಂತರ ನಡೆದ ಚುನಾವಣೆಯಲ್ಲಿ 33 ವರ್ಷದ ಪ್ರಪುಲ್ಲಕುಮಾರ್ ಮಹಂತ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಇವೆಲ್ಲದರ ನಡುವೆ ಪೂರ್ವಾಂಚಲವನ್ನು ಸಬಲೀಕರಿಸುವ ಪ್ರಯತ್ನಗಳೂ ನಿರಂತರವಾಗಿ ಸಾಗಿದೆ.
ಅಭಿವೃದ್ಧಿಯ ವಿವರಗಳು
ಸಾರಿಗೆ ಸಂಪರ್ಕದ ದೃಷ್ಟಿಯಿಂದ ಈಶಾನ್ಯ ಭಾರತವು ರಸ್ತೆ, ರೈಲು ಮತ್ತು ವಾಯುಮಾರ್ಗಗಳಲ್ಲಿ ತುಂಬಾ ಅಭಿವೃದ್ಧಿಯಾಗಿದೆ. 9.15 ಕಿ.ಮೀ ಉದ್ದವಿರುವ ‘ಧೋಲಾ-ಸಾದಿಯಾ’ ಅಂದರೆ ಭೂಪೇನ್ ಹಜಾರಿಕಾ ಸೇತುವೆಯು ಭಾರತದ ಅತಿ ಉದ್ದದ ನದಿ ಸೇತುವೆಯಾಗಿದೆ. 1962ರಲ್ಲಿ ಮೊದಲ ಸೇತುವೆ ನಿರ್ಮಾಣವಾಗಿದ್ದರೆ, 2016ರ ನಂತರ ಹೆಚ್ಚು ಸೇತುವೆಗಳು ನಿರ್ಮಾಣವಾಗಿವೆ. 2026ರ ಹೊತ್ತಿಗೆ ಗುವಾಹಟಿಯಲ್ಲಿ ‘ಭಾಸ್ಕರ ವರ್ಮ’ ಎಂಬ ಮೂರನೇ ಸೇತುವೆ ಸಿದ್ಧವಾಗಲಿದೆ. ಹೀಗೆ ಸಣ್ಣ ಸಣ್ಣ ಸೇತುವೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸುಂದರ ರಸ್ತೆಗಳ ವಿಕಾಸ ಆರಂಭವಾಗಿವೆ. ಅಸ್ಸಾಂನಲ್ಲಿ 7+1 ಏರ್ಪೋರ್ಟ್ ಗಳಿದ್ದು, ಗುವಾಹಟಿಯಲ್ಲಿ ಎರಡನೇ ಟರ್ಮಿನಲ್ ಆರಂಭವಾಗಿದೆ. ರೈಲ್ವೆ ವಿದ್ಯುದೀಕರಣದಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಆರಂಭವಾಗಿ ದೂರದ ಪ್ರವಾಸವಿಂದು ಸಮೀಪವಾಗಿದೆ. ಮೊದಲು ಅಸ್ಸಾಂನ ಗುವಾಹಟಿಯಿಂದ ಸಿಲ್ಚರ್ ತಲುಪಲು ವಾಹನಗಳು ಸೇನಾ ಸುರಕ್ಷೆ ತೆಗೆದುಕೊಂಡು ಹೋಗಬೇಕಾಗಿತ್ತು. ಅಗರ್ತಲಾ ತಲುಪಲು ಎರಡು ದಿನ, ಮಿಜೋರಾಮ್ನ ರಾಜಧಾನಿ ತಲುಪಲು 35-40 ಗಂಟೆಗಳು ಹಾಗೂ ಇಟಾನಗರ್ ತಲುಪಲು 10-12 ಗಂಟೆ ಬೇಕಾಗುತ್ತಿತ್ತು. ಕೇವಲ ಬೆಳಗ್ಗೆ ಮಾತ್ರ ಪ್ರಯಾಣ ಮಾಡಬೇಕಾಗಿದ್ದ ಪರಿಸ್ಥಿತಿ ಬದಲಾಗಿ, ಈಗ ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ತಲುಪಿ ಕಾರ್ಯ ಮುಗಿಸಿ ಮತ್ತೆ ರಾತ್ರಿ ವಾಪಸ್ ಪ್ರಯಾಣ ಮಾಡಬಹುದಾಗಿದೆ. ಸಂಪರ್ಕ ಸುಧಾರಿಸಿದ್ದರಿಂದ ರೈತರು ಬೆಳೆದ ತರಕಾರಿ, ಹಣ್ಣು ಇತ್ಯಾದಿಗಳು ಮುಖ್ಯ ಮಾರುಕಟ್ಟೆಗೆ ಬರುತ್ತಿದ್ದು, ವಿಮಾನದ ಮೂಲಕ ದೇಶ-ವಿದೇಶಗಳಿಗೂ ರಫ್ತು ಆಗುತ್ತಿವೆ.
ಸಾಂಸ್ಕೃತಿಕ ವಾತಾವರಣ
ಅಸ್ಸಾಂನ ಬಿಹೂ ಹಬ್ಬ, ಕಾಮಾಖ್ಯ ದೇವಸ್ಥಾನದ ಅಂಬುಬಾಶಿ ಮೇಳ ಮುಂತಾದ ಅದ್ಭುತ ಸಾಂಸ್ಕೃತಿಕ ಆಚರಣೆಗಳು ಜನರನ್ನು ಸಾಂಸ್ಕೃತಿಕ ಸುಮಧುರ ಬಂಧನದಲ್ಲಿ ಜೋಡಿಸಿಟ್ಟಿದೆ. ಏಪ್ರಿಲ್ 14, 2023ರಲ್ಲಿ ನಡೆದ ಬಿಹೂ ಸಾಂಸ್ಕೃತಿಕ ಕಾರ್ಯಕ್ರಮ, ಫೆಬ್ರವರಿ 24, 2025ರಲ್ಲಿ ನಡೆದ ಝುಮುರ್ ನೃತ್ಯ ಮತ್ತು ಜನವರಿ 17, 2026ರಲ್ಲಿ ನಡೆದ ಬಗರುಂಬ ಜನಪದ ನೃತ್ಯಗಳು ವಿಶ್ವದಾಖಲೆ ಬರೆದಿವೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಉದ್ಯೋಗ ಮತ್ತು ಆರ್ಥಿಕತೆ
ಗುವಾಹಟಿಯ ಸಮೀಪದ ಪ್ರದೇಶದಲ್ಲಿ 27,000 ಕೋಟಿ ರೂ. ಯೋಜನೆಯ ‘ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಫೆಸಿಲಿಟಿ’ (TSAT) ಪ್ರಾರಂಭವಾಗುತ್ತಿದ್ದು, ಇದು 15-20 ಸಾವಿರ ನೇರ ಉದ್ಯೋಗ ನೀಡಲು ಸಜ್ಜಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಐಐಟಿ, ಎನ್ಎಲ್ಯು, ಕೇಂದ್ರೀಯ ವಿಶ್ವವಿದ್ಯಾಲಯಗಳಾದ ಅಸ್ಸಾಂ ಯೂನಿವರ್ಸಿಟಿ ಮತ್ತು ತೇಜ್ಪುರ್ ಯೂನಿವರ್ಸಿಟಿ, ಕೊಕ್ರಝಾರ್ನ ಸಿಐಟಿ ಹಾಗೂ ಐಐಐಟಿ ಜೊತೆಗೆ ಗುವಾಹಟಿಯಲ್ಲಿ ಐಐಎಂ ಕೂಡ ಪ್ರಾರಂಭವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಆರ್ಥಿಕವಾಗಿ ಅಸ್ಸಾಂ ರಾಜ್ಯವು 58,104.55 ಕೋಟಿ ರೂ. ಬಜೆಟ್ ಗಾತ್ರವನ್ನು ಹೊಂದಿದ್ದು, ಇದರಲ್ಲಿ 1,385.77 ಕೋಟಿ ರೂ. ವಿತ್ತೀಯ ಕೊರತೆಯಿದೆ. ಜಿಎಸ್ಡಿಪಿ (GSDP) 2.63 ಲಕ್ಷ ಕೋಟಿಯಷ್ಟಿದ್ದು, ಶೇ.15ರಷ್ಟು ಬೆಳವಣಿಗೆ ಸಾಧಿಸಿದೆ. ಅಲ್ಲದೆ, ಗುವಾಹಟಿಯನ್ನು ದೇಶದ 5 ಪ್ರಮುಖ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಲು ಶ್ರಮಿಸಲಾಗುತ್ತಿದೆ.
ರಾಜ್ಯಗಳ ವಿವರ
ಅಸ್ಸಾಂ
ಪೂರ್ವಾತ್ತರದ ಹೆಬ್ಬಾಗಿಲಾದ ಅಸ್ಸಾಂ 3.60 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಅತಿ ದೊಡ್ಡ ರಾಜ್ಯವಾಗಿದೆ. ಇಲ್ಲಿ ಚಹಾಪುಡಿ (Tea), ವನ್ಯಜೀವಿ, ನೈಸರ್ಗಿಕ ಸಂಪತ್ತು ಹೇರಳವಾಗಿದೆ. ದೇಶದಲ್ಲೇ ಇರುವ ಏಕೈಕ ಗಂಡುನದಿ (Male river) ಬ್ರಹ್ಮಪುತ್ರ ಇಲ್ಲಿ ಹರಿಯುತ್ತದೆ. ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೊರ್ಡೊಲೊಯ್ ಮತ್ತು ಗಾಯಕ ಭೂಪೇನ್ ಹಜಾರಿಕಾ ಅವರ ಜೀವನ ಸಾಧನೆ ಗುರುತಿಸಿ ʼಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಅರುಣಾಚಲ ಪ್ರದೇಶ
ಸೂರ್ಯೋದಯದ ನಾಡು ಎಂದು ಕರೆಯಲ್ಪಡುವ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಡೊಂಗ್ ಗ್ರಾಮದಲ್ಲಿ ದೇಶದಲ್ಲೇ ಮೊದಲು ಸೂರ್ಯನ ಕಿರಣಗಳು ಬೀಳುತ್ತವೆ. 1962ರಲ್ಲಿ ಇಂಡೋ-ಚೀನಾ ಯುದ್ಧವಾದ ಸ್ಥಳವೂ ಇದಾಗಿದ್ದು, ಯುದ್ಧದಲ್ಲಿ ನಾಶವಾದ ಬಾಂಬ್ಗಳು ಮತ್ತು ಮ್ಯೂಸಿಯಂ ಅನ್ನು ಯುದ್ಧದ ನೆನಪಾಗಿ ಈಗಲೂ ನೋಡಬಹುದು. ಸುಮಾರು 14 ಲಕ್ಷ ಜನಸಂಖ್ಯೆ ಇರುವ ಇಲ್ಲಿ 26 ಜಿಲ್ಲೆಗಳು ಮತ್ತು 26 ಜನಾಂಗಗಳಿವೆ. ಟಿರಪ್ ಜನಾಂಗದ ತಾಂಗ್ಸಾ ಪಂಗಡದಲ್ಲಿಯೇ 26 ಉಪಜನಾಂಗಗಳಿದ್ದು, ಅವರ ಭಾಷೆಗಳು ಬೇರೆ ಬೇರೆಯಾಗಿವೆ. ಇಲ್ಲಿನ Adi, Nyshi, Tagin, Apatani, Galo ಎಂಬ ಐದು ಜನಾಂಗಗಳನ್ನು ‘ಅಬೋತಾನಿ’ (ABOTANI) ಎಂದು ಕರೆಯಲಾಗುತ್ತದೆ. ಇವರು ಸೂರ್ಯನನ್ನು ತಾಯಿ (DONYI) ಮತ್ತು ಚಂದ್ರನನ್ನು ತಂದೆ (Polo) ಎಂದು ಸಂಬೋಧಿಸಿ ಪೂಜಿಸುತ್ತಾರೆ. ಇವರನ್ನು ದೋನ್ಯಿ-ಪೊಲೊ ಧರ್ಮದವರೆಂದು ಕರೆಯಲಾಗುತ್ತಿದ್ದು, ಇವರ ಪ್ರಾರ್ಥನಾ ಮಂದಿರವನ್ನು ‘ನಮ್ಲೋ’ ಎನ್ನಲಾಗುತ್ತದೆ. ಈ ಧರ್ಮ ರಕ್ಷಣೆಯ ಕಾರ್ಯದಲ್ಲಿ ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ (ABVKA) ಪ್ರಮುಖ ಪಾತ್ರ ವಹಿಸುತ್ತಿದೆ. ಡಿಸೆಂಬರ್ 31ರಂದು ದೋನ್ಯಿ ಪೊಲೊ ಡೇ ಹಾಗೂ ಡಿಸೆಂಬರ್ 1ರಂದು ಇಂಡಿಜಿನಿಯಸ್ ಫೇತ್ ಡೇ ಆಚರಿಸಲಾಗುತ್ತದೆ. ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮದ (ABVKA) ಅರುಣಾಚಲ ವಿಭಾಗದ ಪ್ರಯತ್ನದಿಂದಾಗಿ ಜನಾಂಗೀಯ ಪರಂಪರೆಯನ್ನು ಉಳಿಸಲು ಸಿಬಿಎಸ್ಇ ಶಾಲೆಯ ಜೊತೆಗೆ ಗುರುಕುಲ ಪ್ರಾರಂಭವಾಗಿದೆ. ಇಲ್ಲಿ ಸ್ಥಳೀಯ ಪದ್ಧತಿಯ ಪರಂಪರೆ, ಮಂತ್ರಗಳು, ಹಬ್ಬಗಳು, ಆಟಗಳನ್ನು ಹೇಳಿಕೊಡಲಾಗುತ್ತದೆ. ಸಂಸ್ಕೃತಿ ರಕ್ಷಣೆಗಾಗಿ ‘ಇಂಡಿಜಿನಿಯಸ್ ಅಫೇರ್ಸ್ ಡಿಪಾರ್ಟ್ ಮೆಂಟ್’ ಕೂಡ ಅಸ್ತಿತ್ವಕ್ಕೆ ಬಂದಿದೆ. ಅ.ಭಾ.ವಿ.ಪ ಯೋಜನೆಯಡಿ
1964ರಲ್ಲಿ ಪ್ರಾರಂಭವಾದ ಸೀಲ್ (SEIL) ಪ್ರಕಲ್ಪದ ರಾಷ್ಟ್ರೀಯ ಏಕತಾ ಯಾತ್ರೆ ಮತ್ತು ಮೈ ಹೋಮ್ ಇಂಡಿಯಾ ಮೂಲಕ ಅನೇಕ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರೀಯತೆ ಮತ್ತು ಸಂಸ್ಕಾರ ನೀಡಲಾಗುತ್ತಿದೆ. ಗೆಗಾಂಗ್ ಅಪಾಂಗ್ (24 ವರ್ಷದ ಮುಖ್ಯಮಂತ್ರಿ), ಟಿ.ಟಿ ಗಾಮ್ಡಿಕ್, ಇಂದಿರಾ ಮಾಲೋ, ನಬಮ್ ತುಕಿ, ನಬಮ್ ರೆಬಿಯಾ, ಡಾ. ತಾಬಾ ನಿರ್ಮಲಿ, ತಾನಾ ನೆಕಾಮ್, ಡಾ. ಕೆ ಲೆಗೊ ಹೀಗೆ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸೀಲ್ ಯಾತ್ರೆಯಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ನೇತೃತ್ವವನ್ನು ನೀಡುತ್ತಿದ್ದಾರೆ. ವಿವೇಕಾನಂದ ಕೇಂದ್ರಿಯ ವಿದ್ಯಾಲಯದ 46 ಶಾಲೆಗಳು, ರಾಮಕೃಷ್ಣ ಆಶ್ರಮ ಮತ್ತು ಶಾರದಾ ಮಿಷನ್ ಶಾಲೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೇಶಭಕ್ತಿ ಎದ್ದು ಕಾಣುತ್ತದೆ; ಒಬ್ಬರನ್ನೊಬ್ಬರು ಭೇಟಿಯಾದಾಗ ನಮಸ್ಕಾರದ ಬದಲಾಗಿ ಜೈ ಹಿಂದ್ ಎಂದು ಸಂಬೋಧಿಸುತ್ತಾರೆ. ಇಲ್ಲಿ ಉಗ್ರಗಾಮಿಗಳು ಶಾಂತರಾಗಿದ್ದು, ಅಭಿವೃದ್ಧಿ ಗತಿ ಚೆನ್ನಾಗಿ ಸಾಗಿದೆ. ಪ್ರತಿವರ್ಷ ಯುಪಿಎಸ್ಸಿಯಲ್ಲಿ 3-4 ವಿದ್ಯಾರ್ಥಿಗಳು ಪಾಸಾಗುತ್ತಾರೆ. ಅನೇಕ ಜಾತಿ ಉಪಜಾತಿಗಳಿದ್ದರೂ ಎಲ್ಲರೂ ಹಿಂದಿ ಭಾಷೆಯಲ್ಲಿ ಮಾತನಾಡುವ ಮೂಲಕ ವಿವಿಧತೆಯಲ್ಲಿ ಏಕತೆ ಮತ್ತು ರಾಷ್ಟ್ರೀಯತೆ ಮೆರೆಯುತ್ತಾರೆ.
ನಾಗಾಲ್ಯಾಂಡ್
ರಾಜಧಾನಿ ಕೊಹಿಮಾ ಮತ್ತು ಆರ್ಥಿಕ ರಾಜಧಾನಿ ದಿಮಾಪುರ್ ಆಗಿರುವ ನಾಗಾಲ್ಯಾಂಡ್, ಹಬ್ಬಗಳ ನಾಡು ಎಂದು ಪ್ರಸಿದ್ಧವಾಗಿದೆ. ಇಲ್ಲಿ ಆವೊ, ಅಂಗಾಮಿ, ಚಕೇಸಾಂಗ್, ಚಾಂಗ್, ಖಿಯಾಮ್ನಿಯುಂಗನ್, ಕೊನ್ಯಾಕ್, ಲೋಥಾ, ಫೋಮ್, ಪೋಚುರಿ, ರೆಂಗ್ಮಾ, ಸಂಗ್ತಮ್, ಸುಮಿ, ಯಿಮ್ಚುಂಗರ್, ಝೆಲಿಯಾಂಗ್, ಕುಕಿ, ಕಚಾರಿ, ತಿಖಿರ್ ಸೇರಿದಂತೆ 17 ಜನಾಂಗಗಳಿವೆ. ಪ್ರತಿಯೊಂದು ಜನಾಂಗಕ್ಕೂ ತಮ್ಮದೇ ಆದ ಭೌಗೋಳಿಕ ಸ್ಥಳ, ಹಬ್ಬಗಳು, ಭಾಷೆ, ವೇಷಭೂಷಣ ಮತ್ತು ಸಂಗೀತ-ನೃತ್ಯಗಳಿವೆ. ಶೇ.95ಕ್ಕೂ ಹೆಚ್ಚು ಕ್ರಿಶ್ಚಿಯನ್ ಅನುಯಾಯಿಗಳಿದ್ದು, ಪ್ರತಿ ಜಾತಿಗಳಿಗೂ ಬ್ಯಾಪ್ಟಿಸ್ಟ್, ರಿವೈವಲ್, ಕ್ಯಾಥೊಲಿಕ್, ಯುಪಿಸಿ ಸೇರಿದಂತೆ ಅನೇಕ ಪಂಗಡದ ಚರ್ಚ್ ಗಳಿವೆ ಮತ್ತು 15ಕ್ಕೂ ಹೆಚ್ಚು ಥಿಯಾಲಜಿ ಕಾಲೇಜುಗಳಿವೆ. ಇಲ್ಲಿನ ಜನರು ತುಂಬಾ ಭಾವನಾತ್ಮಕರಾಗಿದ್ದು, ನಾಗಾ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. 26ಕ್ಕೂ ಹೆಚ್ಚು ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪುಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ತೆರಿಗೆಯಲ್ಲದೇ ಉಗ್ರಗಾಮಿ ಗುಂಪುಗಳ ತೆರಿಗೆ ಕೂಡ ನೀಡಬೇಕು. ಭಾರತ ಸರ್ಕಾರವು ಎನ್ಎಸ್ಸಿಎನ್-ಐಎಂ (NSCN IM) ಜೊತೆ ಒಪ್ಪಂದ ಮಾಡಿಕೊಂಡು ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅಮೆರಿಕ ಮತ್ತು ಚೀನಾಗಳು ಇಲ್ಲಿನ ಅಭಿವೃದ್ಧಿ ತಡೆಯಲು ಈ ಪ್ರತ್ಯೇಕತಾವಾದಿಗಳನ್ನು ಬಳಸಿಕೊಳ್ಳುತ್ತಿವೆ. ಈಸ್ಟರ್ನ್ ನಾಗಾಲ್ಯಾಂಡ್ (ENPO) ಆಂದೋಲನ ಪರಿಗಣಿಸಿ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡು ಫ್ರಾಂಟಿಯರ್ ನಾಗಾಲ್ಯಾಂಡ್ ಟೆರಿಟೋರಿಯಲ್ ಅಥಾರಿಟಿಯನ್ನು (FNTA) ಸ್ಥಾಪಿಸಿದೆ.
ಮಣಿಪುರ
‘ಇಂಫಾಲ’ ಮಣಿಪುರದ ರಾಜಧಾನಿಯಾಗಿದ್ದು, ಇಲ್ಲಿ 29 ಲಕ್ಷ ಜನಸಂಖ್ಯೆಯಿದೆ. ಕಣಿವೆ ಪ್ರದೇಶದಲ್ಲಿ ಮೈತೇಯಿ ಜನಾಂಗ, ಬೆಟ್ಟದ ಪ್ರದೇಶದಲ್ಲಿ ನಾಗಾ ಮತ್ತು ಕುಕಿ-ಜೊ ಜನಾಂಗದವರು ವಾಸಮಾಡುತ್ತಾರೆ. ಇಲ್ಲಿನ ರಾಸ್ ಲೀಲೆ ನೃತ್ಯ, ಇಂಫಾಲದ ತಾಯಂದಿರ ಇಮಾಕೈಥೇಲ್ ಎಂಬ ಮಾರುಕಟ್ಟೆ (IMA market) ಪ್ರಸಿದ್ಧವಾಗಿದೆ. ಸ್ತ್ರೀಪ್ರಭುತ್ವ ಆಡಳಿತ ಮತ್ತು ಸ್ವರಾಜ್ಯಕ್ಕೆ ಸಾಕ್ಷಿಯಾಗಿದೆ. ಲೋಕ್ಟಾಕ್ ಸರೋವರ, ನೇತಾಜಿಯವರು ಐಎನ್ಎ ಧ್ವಜಾರೋಹಣ ಮಾಡಿದ ಸ್ಥಳ ಮೋಯ್ರಾಂಗ್ ಮತ್ತು ಮೋರೇ ಎಂಬ ಇಂಡೋ-ಮ್ಯಾನ್ಮಾರ್ ಬಾರ್ಡರ್ ಪ್ರೇಕ್ಷಣೀಯ ಸ್ಥಳಗಳಾಗಿವೆ. ಬಾಕ್ಸಿಂಗ್ನಲ್ಲಿ ಮೇರಿ ಕೋಮ್, ವೇಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಮತ್ತು ಹಾಕಿಯಲ್ಲಿ ನೀಲಕಂಠ ಶರ್ಮಾ ಅವರು ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಣಿಪುರದ ಕ್ರೀಡಾ ರತ್ನಗಳಾಗಿದ್ದಾರೆ.
ಮಣಿಪುರ ವೇಗವಾಗಿ ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಮೈತೇಯಿ-ಕುಕಿ ಹಿಂಸಾಚಾರವು ರಾಜ್ಯವನ್ನು 10 ವರ್ಷಕ್ಕೂ ಹೆಚ್ಚು ಹಿಂದಕ್ಕೆ ಕೊಂಡೊಯ್ದಿದೆ. ಸರ್ಕಾರ ಶಾಂತಿ ಸ್ಥಾಪಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದರೂ ಸಣ್ಣ-ಸಣ್ಣ ಘಟನೆಗಳು ಈಗಲೂ ನಡೆಯುತ್ತಿವೆ. ಹಿಂಸಾಚಾರಕ್ಕೆ ಮೂಲಕಾರಣ ಡ್ರಗ್ಸ್ ಮತ್ತು ಮಾದಕ ವಸ್ತುಗಳ ವ್ಯಾಪಾರ, ಗಡಿಯಾಚೆಗಿನ ಉಗ್ರವಾದ ಹಾಗೂ ಮತಾಂತರ. ಶಾಂತಿ ಸ್ಥಾಪನೆಗಾಗಿ ಮಣಿಪುರದ ಜನತೆ ಎದುರು ನೋಡುತ್ತಿದ್ದಾರೆ. ಇಲ್ಲಿನ ಉಗ್ರವಾದಿ ಸಂಘಟನೆಗಳನ್ನು ಪೋಷಿಸುತ್ತಿರುವ ಅಮೆರಿಕ ಮತ್ತು ಚೀನಾ ಅಭಿವೃದ್ಧಿ ತಡೆಯುವಲ್ಲಿ ಕಾರ್ಯಮಗ್ನವಾಗಿವೆ.
ತ್ರಿಪುರ
ತ್ರಿಪುರವು ಸ್ವತಂತ್ರ ಭಾರತಕ್ಕೂ ಮೊದಲು 1,300 ವರ್ಷಗಳ ಕಾಲ ಆಡಳಿತ ನಡೆಸಿದ ಮಾಣಿಕ್ಯ ರಾಜವಂಶದ (Manikya Dynasty) ನಾಡಾಗಿದ್ದು, ಅರಮನೆ ರಾಜಧಾನಿ ಅಗರ್ತಲಾದಲ್ಲಿ ನೋಡಲು ಸಿಗುತ್ತದೆ. ಇಲ್ಲಿ ತ್ರಿಪುರಿ, ರಿಯಾಂಗ್, ಜಮಾತಿಯಾ, ಚಕ್ಮಾ, ಹಲಾಮ್, ನೋಟಿಯಾ, ಮೋಗ್, ಕುಕಿ, ಡಾರ್ಲಾಂಗ್, ಗಾರೋ, ಮುಂಡಾ, ಲುಶಾಯ್, ಓರಾನ್, ಸಂತಾಲ್, ಉಚೈ, ಖಾಸಿ, ಭಿಲ್, ಲೆಪ್ಚಾ, ಭುಟಿಯಾ, ಚೈಮಾಲ್ ಹೀಗೆ 19 ಜನಜಾತಿ ಮತ್ತು ಅನೇಕ ಉಪಜನಜಾತಿಗಳಿವೆ. ಬಂಗಾಳಿ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ತ್ರಿಪುರವನ್ನು ಒಂದು ಬಹುಭಾಷಿಕ ರಾಜ್ಯ ಎಂದು ಹೇಳಬಹುದು. 35 ವರ್ಷಗಳ ಕಾಲ ಕಮ್ಯುನಿಸ್ಟ್ ಶಾಸನವಿದ್ದ ರಾಜ್ಯವಿದು. 1980ರಿಂದ 2000ದವರೆಗೆ ಎನ್ಎಲ್ಎಫ್ಟಿ (NLFT) ಮತ್ತು ಎಟಿಟಿಎಫ್ (ATTF) ಉಗ್ರವಾದಿ ಪ್ರತ್ಯೇಕತಾವಾದಿಗಳ ಅಟ್ಟಹಾಸದಿಂದ ಸಾಕಷ್ಟು ಹಾನಿಯಾಗಿದೆ. 1999ರಲ್ಲಿ ಆರ್ಎಸ್ಎಸ್ನ ಪ್ರಚಾರಕರಾದ ಶ್ಯಾಮಲ್ ಸೇನ್ ಗುಪ್ತ, ಸುಧಾಮಯ್ ದತ್ತಾ, ದಿನೇಂದ್ರ ನಾಥ್ ಡೇ ಮತ್ತು ಶುಭಂಕರ್ ಚಕ್ರವರ್ತಿ ಈ ನಾಲ್ವರನ್ನು ಎನ್ಎಲ್ಎಫ್ಟಿ ಉಗ್ರವಾದಿಗಳು ಹಾಸ್ಟೆಲ್ನಿಂದ ಎಳೆದುಕೊಂಡು ಹೋಗಿ ಹತ್ಯೆ ಮಾಡಿದರು. ಆಗಿನ ಗೃಹಸಚಿವ ಎಲ್.ಕೆ. ಅಡ್ವಾಣಿಯವರು ತುಂಬ ಪ್ರಯತ್ನ ಮಾಡಿದರೂ ಕೂಡ ಅವರನ್ನು ಉಳಿಸಲಾಗಲಿಲ್ಲ. ಅವರುಗಳ ಮೃತಶರೀರ ಇಂದಿಗೂ ಸಿಕ್ಕಿಲ್ಲ. ಹಿಂಸಾಚಾರ, ಹತ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾ, ಕಮ್ಯುನಿಸ್ಟ್ ಶಾಸನದ ಆಡಳಿತ ಪದ್ಧತಿ, ಬಂಗಾಳಿ ಮತ್ತು ಜನಜಾತಿಯ ಮಧ್ಯೆ ಇರುವ ಕಂದಕಗಳ ನಡುವೆಯೂ ತ್ರಿಪುರ ರಭಸವಾಗಿ ಬೆಳವಣಿಗೆಯತ್ತ ಸಾಗುತ್ತಿದೆ. ಬಾಂಗ್ಲಾದೇಶದ ಗಡಿ ಇರುವುದರಿಂದ ಅಲ್ಲಿನ ಜನಜೀವನ, ಉದ್ಯೋಗ ಮತ್ತು ವ್ಯಾಪಾರಗಳು ನೇರವಾಗಿ ತ್ರಿಪುರದ ಮೇಲೆ ಪ್ರಭಾವ ಬೀರಿವೆ.
